ಧರ್ಮೋಪದೇಶಕಾಂಡ 24
Kannada Holy Bible: Easy-to-Read Version
24 “ಒಬ್ಬಾಕೆಯನ್ನು ಒಬ್ಬನು ಮದುವೆಯಾದ ಬಳಿಕ, ಅವಳಲ್ಲಿ ನಾಚಿಕೆಕರವಾದದ್ದೇನಾದರೂ ಇದ್ದರೆ ಅವನು ವಿವಾಹವಿಚ್ಛೇದನಾ ಪತ್ರಗಳಿಗೆ ಸಹಿಹಾಕಿ ಅವಳ ಕೈಯಲ್ಲಿ ಕೊಡಬೇಕು. ಆಮೇಲೆ ಆಕೆಯನ್ನು ತನ್ನ ಮನೆಯಿಂದ ಹೊರಗೆ ಕಳುಹಿಸಬೇಕು. 2 ಅವನ ಮನೆಯಿಂದ ಅವಳು ಹೊರಗೆ ಕಳುಹಿಸಲ್ಪಟ್ಟ ಮೇಲೆ ಆಕೆ ಬೇರೊಬ್ಬನನ್ನು ಮದುವೆಯಾಗಬಹುದು. 3-4 ಆಕೆಯ ಹೊಸ ಗಂಡನೂ ಆಕೆಯನ್ನು ಇಷ್ಟಪಡದೆ ಮನೆಯಿಂದ ಹೊರಗೆ ಕಳುಹಿಸಿದರೆ ಅಥವಾ ಎರಡನೆ ಗಂಡನು ಸತ್ತುಹೋದರೆ ಆಕೆಯ ಮೊದಲನೆಯ ಗಂಡನು ಆಕೆಯನ್ನು ಮತ್ತೆ ಮದುವೆಯಾಗಬಾರದು. ಅವನಿಗೆ ಆಕೆಯು ಅಶುದ್ಧಳಾದಳು. ಅವನು ಆಕೆಯನ್ನು ಮತ್ತೆ ಮದುವೆಯಾದಲ್ಲಿ ಅವನು ಯೆಹೋವನಿಗೆ ಅಸಹ್ಯವಾದದ್ದನ್ನು ಮಾಡುವವನಾಗಿದ್ದಾನೆ. ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶದಲ್ಲಿ ನೀವು ಇಂಥ ಪಾಪಗಳನ್ನು ಮಾಡಬಾರದು.
5 “ಒಬ್ಬನು ಹೊಸದಾಗಿ ಮದುವೆಯಾಗಿದ್ದಲ್ಲಿ ಅವನನ್ನು ಸೈನ್ಯಕ್ಕೆ ಕಳುಹಿಸಬಾರದು; ವಿಶೇಷವಾದ ಜವಾಬ್ದಾರಿಯನ್ನು ಅವನಿಗೆ ಕೊಡಬಾರದು. ಒಂದು ವರ್ಷ ಅವನು ಮನೆಯಲ್ಲಿದ್ದುಕೊಂಡು ತನ್ನ ಹೆಂಡತಿಯನ್ನು ಸಂತೋಷಪಡಿಸಬೇಕು.
6 “ಒಬ್ಬನು ನಿಮ್ಮಿಂದ ಏನಾದರೊಂದು ವಸ್ತುವನ್ನು ಎರವಲಾಗಿ ತೆಗೆದುಕೊಳ್ಳುವುದಾದರೆ ಅವನ ಬೀಸುವ ಕಲ್ಲಿನ ಒಂದು ಭಾಗವನ್ನು ಒತ್ತೆಯಾಗಿಟ್ಟುಕೊಳ್ಳಬಾರದು. ಇಲ್ಲವಾದರೆ ಅವನ ಆಹಾರವನ್ನೇ ಅವನಿಂದ ಕಿತ್ತುಕೊಂಡ ಹಾಗಾಯಿತು.
7 “ಒಬ್ಬನು ಇನ್ನೊಬ್ಬ ಇಸ್ರೇಲನನ್ನು ಕದ್ದುಕೊಂಡು ಹೋಗಿ ಅವನನ್ನು ಗುಲಾಮನನ್ನಾಗಿ ಮಾರಬಾರದು. ಹಾಗೆ ಮಾಡಿದವನನ್ನು ಸಾಯಿಸಬೇಕು. ನಿಮ್ಮ ಕುಲದಿಂದ ಅಂಥಾ ಪಾಪವನ್ನು ತೆಗೆದುಹಾಕಬೇಕು.
8 “ನಿಮ್ಮಲ್ಲಿ ಯಾರಿಗಾದರೂ ಚರ್ಮರೋಗವಿದ್ದಲ್ಲಿ ಯಾಜಕನು ಹೇಳುವ ರೀತಿಯನ್ನು ಅನುಸರಿಸಬೇಕು. ನಾನು ಯಾಜಕರಿಗೆ ತಿಳಿಸಿದ ಮೇರೆಗೆ ನೀವು ಮಾಡಬೇಕು. 9 ಈಜಿಪ್ಟಿನಿಂದ ಹೊರಟುಬಂದಾಗ ದಾರಿಯಲ್ಲಿ ದೇವರಾದ ಯೆಹೋವನು ಮಿರ್ಯಾಮಳಿಗೆ ಏನು ಮಾಡಿದನೆಂದು ಸ್ಮರಿಸಿರಿ.
10 “ನೀವು ಯಾರಿಗಾದರೂ ಸಾಲಕೊಟ್ಟರೆ ಅದಕ್ಕೆ ಒತ್ತೆಯಾಗಿ ವಸ್ತುವನ್ನು ತೆಗೆದುಕೊಳ್ಳಲು ಅವನ ಮನೆಯೊಳಗೆ ಹೋಗಬೇಡಿ. 11 ನೀವು ಹೊರಗೆ ನಿಂತುಕೊಳ್ಳಬೇಕು. ಸಾಲ ತೆಗೆದುಕೊಂಡ ವ್ಯಕ್ತಿಯು ತನ್ನ ಮನೆಯೊಳಗಿಂದ ಏನಾದರೂ ವಸ್ತುವನ್ನು ಒತ್ತೆಯಾಗಿ ನಿಮಗೆ ತಂದುಕೊಡುವನು. 12 ಅವನು ಬಡವನಾದರೆ ಅವನು ತನ್ನ ಕಂಬಳಿಯನ್ನೇ ತಂದುಕೊಡಬಹುದು. ಅದನ್ನು ರಾತ್ರಿ ಇಟ್ಟುಕೊಳ್ಳಬಾರದು. 13 ಪ್ರತೀ ಸಾಯಂಕಾಲ ಆ ಕಂಬಳಿಯನ್ನು ಹಿಂದಕ್ಕೆ ಕೊಡಬೇಕು. ಆಗ ಅವನಿಗೆ ರಾತ್ರಿ ಹೊದ್ದುಕೊಳ್ಳಲು ಇರುವುದು. ಅವನು ನಿನ್ನನ್ನು ಆಶೀರ್ವದಿಸುವನು. ಅಲ್ಲದೆ ದೇವರಾದ ಯೆಹೋವನು ನಿಮ್ಮ ಆ ಒಳ್ಳೆಯ ಕಾರ್ಯವನ್ನು ಗಣನೆಗೆ ತರುವನು.
14 “ಬಡವನಾಗಿರುವ ದಿನಕೂಲಿಯವನಿಗೆ ಮೋಸ ಮಾಡಬಾರದು. ಅವನು ಇಸ್ರೇಲನಾಗಿರಬಹುದು ಅಥವಾ ಪರದೇಶಸ್ಥನಾಗಿರಬಹುದು. 15 ಸೂರ್ಯ ಮುಳುಗುವುದರೊಳಗೆ ಅವನಿಗೆ ಸಲ್ಲಬೇಕಾದ ಕೂಲಿಯನ್ನು ಕೊಟ್ಟುಬಿಡು, ಅವನು ಬಡವನಾಗಿದ್ದಾನೆ. ನೀನು ಕೊಡುವ ಕೂಲಿಯಿಂದಲೇ ಅವನು ತನ್ನ ಹಸಿವನ್ನು ನೀಗಿಸಿಕೊಳ್ಳಬೇಕು. ನೀನು ಅವನ ಕೂಲಿ ಕೊಡದಿದ್ದಲ್ಲಿ ಅವನು ದೇವರಾದ ಯೆಹೋವನಿಗೆ ದೂರು ಹೇಳುವನು. ಆಗ ನೀನು ಪಾಪಮಾಡುವವನಾಗಿರುವೆ.
16 “ಮಕ್ಕಳು ಮಾಡಿದ ಪಾಪಕ್ಕಾಗಿ ಅವರ ತಂದೆತಾಯಿಗಳಿಗೆ ಮರಣಶಿಕ್ಷೆಯನ್ನು ವಿಧಿಸಕೂಡದು. ತಂದೆತಾಯಿಗಳು ಮಾಡಿದ ಪಾಪಕ್ಕಾಗಿ ಮಕ್ಕಳಿಗೆ ಮರಣಶಿಕ್ಷೆಯನ್ನು ವಿಧಿಸಕೂಡದು. ಪಾಪ ಮಾಡಿದವರಿಗೇ ಮರಣ ಶಿಕ್ಷೆಯಾಗಬೇಕು.
17 “ಪರದೇಶಸ್ಥರನ್ನು ಮತ್ತು ಅನಾಥರನ್ನು ಯೋಗ್ಯವಾದ ರೀತಿಯಲ್ಲಿ ನೋಡಿಕೊಳ್ಳಬೇಕು. ವಿಧವೆಯರ ಬಟ್ಟೆಗಳನ್ನು ಒತ್ತೆಯಿಟ್ಟುಕೊಳ್ಳಕೂಡದು. 18 ನೀವು ಈಜಿಪ್ಟಿನಲ್ಲಿ ಬಡ ಗುಲಾಮರಾಗಿದ್ದುದನ್ನು ಸ್ಮರಿಸಿಕೊಳ್ಳಿರಿ. ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಬಿಡಿಸಿ ಸ್ವತಂತ್ರರನ್ನಾಗಿ ಮಾಡಿದನು. ಆದ್ದರಿಂದ ನೀವು ಬಡವರಿಗೆ ದಯೆ ತೋರಿಸಬೇಕು.
19 “ನೀವು ಹೊಲದಲ್ಲಿ ಬೆಳೆದ ಬೆಳೆಯನ್ನು ಕೊಯ್ದು ಮನೆಗೆ ತರುವಾಗ ಕೆಲವು ಸಿವುಡುಗಳನ್ನು ನೀವು ಹೊಲದಲ್ಲಿಯೇ ಬಿಟ್ಟು ಬಂದಿದ್ದರೆ ಅದನ್ನು ತರಲು ಹಿಂದಕ್ಕೆ ಹೋಗಬೇಡಿ. ಅದನ್ನು ನಿಮ್ಮ ಊರಿನಲ್ಲಿರುವ ಅನಾಥರಿಗೂ ವಿಧವೆಯರಿಗೂ ಪರದೇಶಸ್ಥರಿಗೂ ಬಿಡಿರಿ. ನೀವು ಹಾಗೆ ಮಾಡಿದರೆ ದೇವರಾದ ಯೆಹೋವನು ನಿಮಗೆ ಶುಭವನ್ನು ಉಂಟುಮಾಡುವನು. 20 ನೀವು ನಿಮ್ಮ ಎಣ್ಣೆಮರಗಳ ಕಾಯಿಗಳನ್ನು ಉದುರಿಸುವಾಗ ಮತ್ತೆ ಹೋಗಿ ಕೊಂಬೆಗಳಲ್ಲಿ ಕಾಯಿ ಹುಡುಕಬಾರದು. ಬಿಟ್ಟ ಕಾಯಿಗಳು ಪರದೇಶಸ್ಥರಿಗೂ ಊರಿನ ಅನಾಥ ಮತ್ತು ವಿಧವೆಯವರಿಗೂ ಆಗುವುದು. 21 ನಿಮ್ಮ ತೋಟದಿಂದ ಹಣ್ಣುಗಳನ್ನು ಕೂಡಿಸುವಾಗ ಉಳಿದ ಹಣ್ಣುಗಳನ್ನು ಶೇಖರಿಸಲು ಹಿಂತಿರುಗಬೇಡಿ; ಆ ಉಳಿದ ದ್ರಾಕ್ಷಿಹಣ್ಣುಗಳು ಊರಲ್ಲಿರುವ ಅನಾಥರಿಗೂ ವಿಧವೆಯರಿಗೂ ಮತ್ತು ಪರದೇಶಸ್ಥರಿಗೂ ಬಿಡಿರಿ. 22 ನೀವು ಈಜಿಪ್ಟ್ ದೇಶದಲ್ಲಿ ಬಡ ಗುಲಾಮರಾಗಿದ್ದುದನ್ನು ನೆನಪಿನಲ್ಲಿಟ್ಟುಕೊಳ್ಳಿರಿ. ಆದ್ದರಿಂದಲೇ ಬಡವರಿಗೆ ನೀವು ಹೀಗೆ ಮಾಡಬೇಕೆಂದು ನಿಮಗೆ ತಿಳಿಸುತ್ತಿದ್ದೇನೆ.
Kannada Holy Bible: Easy-to-Read Version. All rights reserved. © 1997 Bible League International