Add parallel Print Page Options

ಯೆಹೋವನು ಪ್ರಪಂಚವನ್ನು ಆಳುತ್ತಾನೆ

48 ಯೆಹೋವನು ಹೇಳುವುದೇನೆಂದರೆ, “ಯಾಕೋಬನ ಮನೆತನದವರೇ, ನನ್ನ ಮಾತುಗಳನ್ನು ಕೇಳಿರಿ.
ಜನರು ನಿಮ್ಮನ್ನು ಇಸ್ರೇಲ್ ಎಂದು ಕರೆಯುತ್ತಾರೆ.
    ನೀವು ಯೆಹೂದದ ಕುಟುಂಬದವರು.
ನೀವು ಯೆಹೋವನ ಹೆಸರಿನಲ್ಲಿ ಒಡಂಬಡಿಕೆ ಮಾಡಿಕೊಳ್ಳುವಿರಿ. ನೀವು ಯೆಹೋವನ ನಾಮವನ್ನು ಸ್ತುತಿಸುವಿರಿ, ಆದರೆ ನೀವು ಇವುಗಳನ್ನು ಮಾಡುವಾಗ
    ನಂಬಿಗಸ್ತರಾಗಿರುವದಿಲ್ಲ; ಯಥಾರ್ಥರಾಗಿರುವುದಿಲ್ಲ.

“ಹೌದು, ಅವರು ಪರಿಶುದ್ಧ ಪಟ್ಟಣದ ನಿವಾಸಿಗಳಾಗಿದ್ದಾರೆ.
    ಅವರು ಇಸ್ರೇಲಿನ ದೇವರನ್ನು ಅವಲಂಬಿಸಿಕೊಂಡಿದ್ದಾರೆ.
ಸರ್ವಶಕ್ತನಾದ ಯೆಹೋವನು ಎಂಬುದೇ ಆತನ ಹೆಸರು.

“ಸಂಭವಿಸಲಿಕ್ಕಿರುವ ಸಂಗತಿಗಳ ಬಗ್ಗೆ
    ಬಹುಕಾಲದ ಹಿಂದೆಯೇ ನಿಮಗೆ ತಿಳಿಸಿದ್ದೆನು.
    ಫಕ್ಕನೇ ಅವು ನೆರವೇರುವಂತೆ ಮಾಡಿದೆನು.
ನೀವು ಹಠಮಾರಿಗಳಾಗಿದ್ದು ನಾನು ಹೇಳಿದ್ದನ್ನು ನಂಬದೆ ಹೋದದ್ದರಿಂದ ನಾನು ಹಾಗೆ ಮಾಡಿದೆನು.
    ನೀವು ಕಬ್ಬಿಣದಂತೆ ಬಗ್ಗದ ಹಠಮಾರಿಗಳಾಗಿದ್ದೀರಿ.
    ಹಿತ್ತಾಳೆಯಂತೆ ಗಟ್ಟಿಯಾಗಿದ್ದೀರಿ.
ಸಂಭವಿಸಲಿರುವ ಸಂಗತಿಗಳನ್ನು ಬಹುಕಾಲದ ಮೊದಲೇ ನಿಮಗೆ ತಿಳಿಸಿದ್ದೆನು.
    ಅವು ಸಂಭವಿಸುವದಕ್ಕಿಂತ ಎಷ್ಟೋ ಕಾಲದ ಮೊದಲೇ ತಿಳಿಸಿದೆನು.
ನೀವು, ‘ಇವುಗಳನ್ನು ಮಾಡಿದ್ದು ನಮ್ಮ ವಿಗ್ರಹಗಳೇ,
    ನಮ್ಮ ಮರ ಮತ್ತು ಲೋಹದ ದೇವರುಗಳೇ ಅವುಗಳನ್ನು ಮಾಡಿದ್ದು ಎಂದು ನೀವು ಹೇಳದಂತೆ ಮಾಡಿದೆನು.’”

ಇಸ್ರೇಲರನ್ನು ಶುದ್ಧೀಕರಿಸಲು ದೇವರು ಅವರನ್ನು ಶಿಕ್ಷಿಸುತ್ತಾನೆ

“ನಡೆದದ್ದನ್ನು ನೀವು ಕಣ್ಣಾರೆ ನೋಡಿದಿರಿ; ಕಿವಿಯಾರೆ ಕೇಳಿದಿರಿ.
    ಆದ್ದರಿಂದ ನೀವು ಇತರರಿಗೆ ಸುದ್ದಿಯನ್ನು ತಿಳಿಸಬೇಕು.
ನೀವು ಈವರೆಗೆ ತಿಳಿಯದಿರುವ
    ಗುಪ್ತವಿಷಯಗಳನ್ನು ಈಗ ನಿಮಗೆ ತಿಳಿಸುವೆನು.
ಇವು ಬಹಳ ಕಾಲದ ಹಿಂದೆ ನಡೆದ ವಿಷಯಗಳಲ್ಲ.
    ಇವು ಈಗ ಸಂಭವಿಸುವ ವಿಷಯಗಳು.
ಈ ದಿವಸಕ್ಕೆ ಮೊದಲು ನೀವು ಇದನ್ನು ಕೇಳಲಿಲ್ಲ.
    ಆದ್ದರಿಂದ ‘ನಮಗೆ ಇದೆಲ್ಲಾ ಗೊತ್ತಿದೆ’ ಎಂದು ನೀವು ಹೇಳಲಾಗದು.
ಆದರೆ ನಾನು ಇವುಗಳನ್ನು ತಿಳಿಸಿದ ಮೇಲೂ ನೀವು ನನ್ನ ಮಾತನ್ನು ಕೇಳದೆಹೋದಿರಿ.
    ನೀವು ನನ್ನಿಂದ ಏನೂ ಕಲಿಯಲಿಲ್ಲ.
    ನಾನು ಏನು ಹೇಳಿದರೂ ನೀವು ಕೇಳಲಿಲ್ಲ.
ಪ್ರಾರಂಭದಿಂದಲೇ ನೀವು ನನಗೆ ವಿರುದ್ಧವಾಗುವಿರಿ ಎಂದು ನಾನು ತಿಳಿದಿದ್ದೆನು.
    ನೀವು ಹುಟ್ಟಿದಾಗಿನಿಂದಲೇ ನನಗೆ ವಿರುದ್ಧವಾಗಿ ದಂಗೆ ಎದ್ದಿರುವಿರಿ.

“ಆದರೆ ನಾನು ತಾಳ್ಮೆಯಿಂದಿರುವೆನು.
    ನಾನು ಇದನ್ನು ನನ್ನ ಹೆಸರಿನ ನಿಮಿತ್ತ ಮಾಡುವೆನು.
ನಾನು ನಿಮ್ಮ ಮೇಲೆ ಕೋಪಗೊಂಡು ನಾನು ನಾಶಮಾಡದೆ ಇದ್ದುದಕ್ಕಾಗಿ ಜನರು ನನ್ನನ್ನು ಸ್ತುತಿಸುವರು.
    ನನ್ನ ತಾಳ್ಮೆಗಾಗಿ ನೀವು ನನ್ನನ್ನು ಕೊಂಡಾಡುವಿರಿ.

10 “ಇಗೋ, ನಾನು ನಿಮ್ಮನ್ನು ಶುದ್ಧೀಕರಿಸುತ್ತೇನೆ.
    ಜನರು ಬೆಳ್ಳಿಯನ್ನು ಬೆಂಕಿಯಿಂದ ಶುದ್ಧೀಕರಿಸುತ್ತಾರೆ.
    ಆದರೆ ನಾನು ನಿಮ್ಮನ್ನು ಸಂಕಟಗಳಿಂದ ಶುದ್ಧೀಕರಿಸುವೆನು.
11 ನಾನು ಇದನ್ನು ನನಗಾಗಿ ಮಾಡುವೆನು.
    ನಾನು ನಿಮ್ಮನ್ನು ಪ್ರಾಮುಖ್ಯವಾದ ವ್ಯಕ್ತಿಗಳೆಂದು ಪರಿಗಣಿಸುವುದಿಲ್ಲ.
    ನನ್ನ ಮಹಿಮೆಯನ್ನು ಮತ್ತು ನನಗೆ ಸಲ್ಲತಕ್ಕ ಸ್ತುತಿಯನ್ನು ತೆಗೆದುಕೊಳ್ಳಲು ನಾನು ಸುಳ್ಳುದೇವರುಗಳಿಗೆ ಅವಕಾಶ ಕೊಡುವುದಿಲ್ಲ.

12 “ಯಾಕೋಬೇ, ನನಗೆ ಕಿವಿಗೊಡು.
ಇಸ್ರೇಲೇ, ನೀವು ನನ್ನ ಜನರಾಗುವದಕ್ಕಾಗಿ ನಿಮ್ಮನ್ನು ನಾನು ಕರೆದೆನು.
    ಆದ್ದರಿಂದ ನನ್ನ ಮಾತುಗಳನ್ನು ಕೇಳಿರಿ.
ನಾನೇ ಆದಿಯೂ
    ಅಂತ್ಯವೂ ಆಗಿದ್ದೇನೆ.
13 ಭೂಮಿಯನ್ನು ನನ್ನ ಕೈಗಳಿಂದಲೇ ನಿರ್ಮಿಸಿದೆನು.
    ನನ್ನ ಬಲಗೈ ಆಕಾಶವನ್ನು ಉಂಟುಮಾಡಿತು.
ನಾನು ಅವುಗಳನ್ನು ಕರೆದಾಗ
    ಅವು ನನ್ನ ಬಳಿಗೆ ಬರುವವು.

14 “ನೀವೆಲ್ಲರೂ ನನ್ನ ಬಳಿಗೆ ಬಂದು ನನ್ನ ಮಾತುಗಳನ್ನು ಕೇಳಿರಿ.
    ಸುಳ್ಳುದೇವರುಗಳಲ್ಲಿ ಯಾರಾದರೂ ಈ ವಿಷಯಗಳು ಸಂಭವಿಸುತ್ತವೆಯೆಂದು ಹೇಳಿರುವರೇ? ಇಲ್ಲ!”
ಯೆಹೋವನು ಆರಿಸಿದ ಮನುಷ್ಯನು ಬಾಬಿಲೋನಿಗೂ
    ಕಸ್ದೀಯರಿಗೂ ತನ್ನ ಇಷ್ಟಬಂದ ಹಾಗೆ ಮಾಡುವನು.

15 “ನಾನು ಅವನನ್ನು ಕರೆಯುವುದಾಗಿ ಹೇಳಿದ್ದೇನೆ.
    ನಾನು ಅವನನ್ನು ಕರೆದುತರುವೆನು;
    ಅವನಿಗೆ ಜಯವನ್ನು ಅನುಗ್ರಹಿಸುವೆನು.
16 ನನ್ನ ಬಳಿಗೆ ಬಂದು ನನ್ನ ಮಾತು ಕೇಳಿರಿ!
ಬಾಬಿಲೋನ್ ಒಂದು ದೇಶವಾಗಿ ಪರಿಣಮಿಸುವಾಗ ನಾನು ಅಲ್ಲಿದ್ದೆನು.
ಆದಿಯಿಂದಲೇ ನಾನು ಸ್ವಷ್ಟವಾಗಿ ಹೇಳಿದ್ದೇನೆ.
    ಜನರಿಗೆ ಅರ್ಥವಾಗುವ ರೀತಿಯಲ್ಲಿ ಹೇಳಿದ್ದೇನೆ.”

ಯೆಶಾಯನು ಹೇಳಿದ್ದೇನೆಂದರೆ: “ಈಗ ನನ್ನ ಒಡೆಯನಾದ ಯೆಹೋವನೂ ಆತನ ಆತ್ಮನೂ ಈ ವಿಷಯಗಳನ್ನು ತಿಳಿಸಲು ನನ್ನನ್ನು ಕಳುಹಿಸಿದ್ದಾನೆ. 17 ರಕ್ಷಕನೂ ಇಸ್ರೇಲರ ಪರಿಶುದ್ಧನೂ ಆಗಿರುವ ಯೆಹೋವನು ಹೇಳುವುದೇನೆಂದರೆ,

“ನಾನೇ ನಿಮ್ಮ ದೇವರಾದ ಯೆಹೋವನು.
    ಯಾವದು ಒಳ್ಳೆಯದೋ, ಪ್ರಯೋಜನಕರವೋ ಅದನ್ನು ಮಾಡಲು ನಿಮಗೆ ಕಲಿಸುತ್ತೇನೆ.
    ನೀವು ಹೋಗಲೇಬೇಕಾದ ದಾರಿಯಲ್ಲಿ ನಿಮ್ಮನ್ನು ನಡಿಸುವೆನು.
18 ನೀವು ನನಗೆ ವಿಧೇಯರಾಗಿದ್ದರೆ,
    ತುಂಬಿಹರಿಯುವ ಹೊಳೆಯಂತೆ
    ಸಮಾಧಾನವು ನಿಮಗೆ ದೊರಕುತ್ತಿತ್ತು.
ಸಮುದ್ರದ ತೆರೆಯಂತೆ ಮೇಲಿಂದ ಮೇಲೆ
    ನಿಮಗೆ ಒಳ್ಳೆಯವುಗಳು ಬರುತ್ತಿದ್ದವು.
19 ನೀವು ನನಗೆ ವಿಧೇಯರಾಗಿದ್ದರೆ,
    ನಿಮ್ಮ ಸಂತಾನವು ಅಭಿವೃದ್ಧಿಯಾಗುತ್ತಿತ್ತು.
    ಅವರು ಸಮುದ್ರದ ಮರಳಿನಂತೆ ಅಸಂಖ್ಯಾತರಾಗಿರುತ್ತಿದ್ದರು.
ನೀವು ನನಗೆ ವಿಧೇಯರಾಗಿದ್ದರೆ, ನೀವು ನಾಶವಾಗಿರುತ್ತಿರಲಿಲ್ಲ
    ಮತ್ತು ನನ್ನೆದುರಿನಿಂದ ನಿಮ್ಮ ಹೆಸರು ತೆಗೆದುಹಾಕಲ್ಪಡುತ್ತಿರಲಿಲ್ಲ.”

20 ನನ್ನ ಜನರೇ, ಬಾಬಿಲೋನನ್ನು ತೊರೆಯಿರಿ.
    ನನ್ನ ಜನರೇ, ಕಸ್ದೀಯರಿಂದ ಓಡಿಹೋಗಿರಿ.
ಈ ವರ್ತಮಾನವನ್ನು ಜನರಿಗೆ ಹರ್ಷಿಸುತ್ತಾ ತಿಳಿಸಿರಿ.
    ಲೋಕದ ಕಟ್ಟಕಡೆಯ ಸ್ಥಳದಲ್ಲೂ ಈ ವರ್ತಮಾನವನ್ನು ಪ್ರಕಟಿಸಿರಿ.
“ಯಾಕೋಬನನ್ನು ಯೆಹೋವನು ರಕ್ಷಿಸಿದನೆಂದು” ಜನರಿಗೆಲ್ಲಾ ತಿಳಿಸಿರಿ.
21 ಯೆಹೋವನು ತನ್ನ ಜನರನ್ನು ಮರುಭೂಮಿಯಲ್ಲಿ ನಡೆಸಿಕೊಂಡು ಬಂದನು.
    ಜನರು ಬಾಯಾರಲಿಲ್ಲ;
ಯಾಕೆಂದರೆ ಆತನು ಬಂಡೆಯಿಂದ ನೀರು ಹರಿಯುಂತೆ ಮಾಡಿದನು.
    ಆತನು ಬಂಡೆಯನ್ನು ಇಬ್ಭಾಗ ಮಾಡಿದಾಗ ನೀರು ಅದರೊಳಗಿಂದ ಹರಿಯಿತು.

22 ಆದರೆ ಯೆಹೋವನು ಹೇಳುವುದೇನೆಂದರೆ,
    “ದುಷ್ಟರಿಗೆ ಸಮಾಧಾನವೇ ಸಿಗದು.”